Thursday, December 13, 2018

"ಛಿದ್ರಗೊಂಡ ಸಂಬಂಧ"

ನಮ್ಮಿಬ್ಬರ ಮಧ್ಯೆ ನೀರವ ಮೌನ ಆವರಿಸಿತು,
ಬಾಂಧವ್ಯದ ಸರಪಳಿ ಸಾಲಾಗಿ ಕಳಚಿತು;
ನಂಬಿಕೆಯ ಗಾಜು ನುಚ್ಚು ನೂರಾಯಿತು,
ಸ್ನೇಹದ ಸಲುಗೆ ಸುಟ್ಟು ಭಸ್ಮವಾಯಿತು;
ಪ್ರೀತಿಯ ಕನಸು ನನಸಾಗದೆ ಛಿದ್ರವಾಯಿತು.
                                              - ಸ್ಫೂರ್ತಿ

"ನಡತೆ"

ಪಡೆಯಬಹುದು ಸಂಪತ್ತನ್ನು ಪ್ರತಿದಿನವೂ,
ಅದ ತರುವುದು ನಮಗೆ ಅಂತಸ್ತನ್ನು ದಿನ ದಿನವೂ;
ಕಲಿಯಬಹುದು ವಿದ್ಯೆಯನು ಸದಾಕಾಲ,
ಅದ ತಿಳಿಸುವುದು ಅರಿವನು ಚಿರಕಾಲ;
ಆದರೆ;
ಗಳಿಸಬೇಕು ಒಳ್ಳೆಯ ನಡತೆಯನ್ನು ಕ್ಷಣ ಕ್ಷಣ,
ಅದ ಗೌರವಿಸುವುದು ವ್ಯಕ್ತಿಯನು ತಕ್ಷಣ.
                                    - ಸ್ಫೂರ್ತಿ

"ಕನಸೆಂಬ ಪ್ರೀತಿ"

ಕನಸೆಂಬ ಪ್ರೀತಿಯ ಸಂತೆಯಲ್ಲಿ,
ಯಾರಿಗೂ ಸಿಗದೆ ಕಳೆದು ಹೋದೆ ನಾನು;
ನೀ ಬಂದು ಸೇರುವೆ ಎಂಬ ಭ್ರಮೆಯಲ್ಲಿ,
ಹಗಲಿರುಗಳ ಎಣಿಸುತ್ತಾ ಕುಳಿತೆ ನಾನು.
                                  - ಸ್ಫೂರ್ತಿ

"ಸ್ನೇಹ ಎಂಬ ಕವನ"

ರಚಿಸಿದೆವು ಸ್ನೇಹ ಎಂಬ ಕವನವನು,
ಪ್ರತಿ ಪದಗಳಲ್ಲಿ ಪ್ರೀತಿಯ ಜೇನ ತುಂಬಿದೆ ನೀನು;
ಪ್ರತಿ ಸಾಲುಗಳಲ್ಲಿ ಸ್ನೇಹದ ರುಚಿ ಸವೆದೆ ನಾನು,
ಸ್ಟಾರಸ್ಯ ತುಂಬಿದ ಗೆಳತಿ ಆಗು ನೀನು.
                                                 - ಸ್ಫೂರ್ತಿ

"ಹರಿಯುವ ನೀರು"

ಜುಳು ಜುಳನೆ  ಹರಿಯುವೆ ನೀನು,
ಎಲ್ಲಿಗೆ ಹರಿದು ಹೋಗುವೆ ನೀನು?
ಯಾರ ದಾಹವನ್ನು ತೀರಿಸುವೆ ನೀನು?
ಯಾವ ಕಡಲನು ಸೇರುವೆ ನೀನು?
                                 - ಸ್ಫೂರ್ತಿ

"ಲೋಕಕ್ಕೆ ನಿನ್ನ ಕೊಡುಗೆ ಆಗಬೇಕು ಅಜರಾಮರ"

ಬಾಳಬೇಕು ನೀ ಜಗವೇ ಬಾಗೋತರ,
ಸಾಯಬೇಕು ನೀ ಸ್ಮಶಾನ ಅಳೋತರ;
ಹೆಸರಾಗಬೇಕು ನೀ ಯವರಾಜ ಮರುಗೋತರ;
ಆಗಬೇಕು ನೀ ಈ ಲೋಕಕ್ಕೆ ಅಜರಾಮರ.
                                          - ಸ್ಫೂರ್ತಿ

"ಬದುಕೆಂಬ ವೀಣೆ"

ಭಾವನೆಗಳ ವೀಣೆ ಮೀಟಿಸಿ,
ಸವಿನುಡಿಗಳ ಸ್ವರ ಹೊರಡಿಸಿ;
ಪ್ರೀತಿಯೆಂಬ ರಾಗವ ಸೇರಿಸಿ,
ಬಾಳೆಂಬ ಋತುಗಾಯನ ಹರಿಸಿ;
ಪರರ ಬದುಕನು ಹಸನಾಗಿಸಿ.
                                - ಸ್ಫೂರ್ತಿ

"ನನಸಾಗದ ಕನಸು"

ನನ್ನ ಪ್ರೀತಿಯೆಂಬ ಒಗಟಿಗೆ,
ಸಿಗದೆ ಇರೋ ಉತ್ತರ ನೀನು;
ನನ್ನ ಕನಸೆಂಬ ಸ್ವಪ್ನದ ಬದುಕಿಗೆ,
ಎಂದೂ ನನಸಾಗದ ಕನಸು ನೀನು!
                                - ಸ್ಫೂರ್ತಿ

"ನೈಜ ಸತ್ಯ"

ಬಡವ ಎಂದು ಕುಗ್ಗಬೇಡ,
ಬಲ್ಲಿದ ಎಂಬ ಹಿಗ್ಗಬೇಡ;
ಸಂಕಷ್ಟ ಎಂದೂ ಸಾವಲ್ಲ,
ಸಂತಸ ಎಂದೂ ಅಚಲವಲ್ಲ.
                            - ಸ್ಫೂರ್ತಿ

"ವೇದನೆಯ ಯೋಚನೆ"

ಬದುಕಲು ಬೇಕು ಭಾವನೆ,
ಭಾವನೆಗಳ ತುಂಬಾ ನಿವೇದನೆ;
ನಿವೇದನೆಯನ್ನು ಕಾಡುವ ವೇದನೆ,
ನನಗಾಗಿದೆ ಅದರದೆ ಯೋಚನೆ.
                                 - ಸ್ಫೂರ್ತಿ

"ಭಗ್ನ ಪ್ರೇಮಿಯ ನೋವು"

ಕಾರಣವೇ ಇಲ್ಲದೆ ಬಿಟ್ಟು ಹೋದೆ ನೀ,
ಕಾರಣವ ಹುಡುಕುತ ನಿನ್ನ ಹಿಂದೆ ನಿಂತೆ ನಾ;
ಒಮ್ಮೆ ಆದರೂ ತಿರುಗಿ ನೋಡು ನೀ,
ನಿನ್ನ ನೆನಪಲ್ಲೇ ಸಾಯುವ ಭಗ್ನ ಪ್ರೇಮಿ ನಾ.
                                          - ಸ್ಫೂರ್ತಿ

"ಸ್ವಾರ್ಥ ಜನಗಳ ಧರ್ಮ"

ಜೀವನದಲ್ಲಿ ನಾ ಕಂಡೆ ಪಾಪಿಗಳ ಸಂತೆ,
ಸಿಕ್ಕಿತು ನನಗೆ ಮದ-ಮತ್ಸರದ ಕಂತೆ;
ಎಲ್ಲರ ಮನದಲ್ಲಿ ಆಸೆಗಳ ಚಿಂತೆ,
ಎತ್ತ ಸಾಗಲಿ ಎಂದು ಮೂಕಳಾಗಿ ನಿಂತೆ.
                                   - ಸ್ಫೂರ್ತಿ

"ನಂಬಿಕೆ ದ್ರೋಹ"

ಇಟ್ಟೆನು ನಿನ್ನ ಮೇಲೆ ನಂಬಿಕೆಯನು,
ಅದ ಉಳಿಸಿಕೊಳ್ಳುವ ನಟನೆ ಮಾಡಿದೆ ನೀನು;
ಕಂಡೆನು ನಿನ್ನ ಆ ಅಪನಂಬಿಕೆಯನು,
ಅದ ತಿಳಿದು ಮೂರ್ಖಳಾಗಿ ಕುಳಿತೆ ನಾನು.
                                        - ಸ್ಫೂರ್ತಿ

"ಪ್ರತಿ ಒಬ್ಬ ನಿಜ ಪ್ರೇಮಿಯ ನೋವು"

ವೃತ್ತಿಯಲ್ಲಿ ಬಡವನಾದೆನೆಂದು ನಾನು,
ತೊರೆಯದಿರು ಓ ನನ್ನ ಗೆಳತಿಯೇ;
ಪ್ರೀತಿಯ ಹಂಚುವಲ್ಲಿ ಸಿರಿವಂತನು ನಾನು,
ಎಂದೂ ಕಡೆಗಣಿಸದಿರು ಓ ನನ್ನ ಗೆಳತಿಯೇ.
                                        - ಸ್ಫೂರ್ತಿ

"ಜಗತ್ತಿನ ನಿಜ ರೂಪ"

ಎಲ್ಲೆಲ್ಲೂ ಹರಡುತ್ತಿದೆ ಜಾತಿಯ ಹೊಗೆ,
ತನು - ಮನದಲ್ಲಿ ಕುದಿಯುತ್ತಿದೆ ಸ್ವಾರ್ಥದ ಹಗೆ;
ಎತ್ತ ನೋಡಿದರಲ್ಲಿ ಬಡವ,ಶ್ರೀಮಂತ ಎಂಬ ಬಗೆ,
ಕಾಣ ಸಿಗುವುದೇ ಇಲ್ಲಿ ಪ್ರೀತಿ ಮಮಕಾರದ ನಗೆ???
                                      - ಸ್ಫೂರ್ತಿ

"ಒಡಕಾಗಿರುವ ಹೃದಯದ ಮಾತು"

ಭಾವನೆಗಳಿಗೆ ಬೆಲೆ ಕೊಡದ ನೀನು,
ಬಣ್ಣ ಬಳಿದು ಹೋದೆ ಪ್ರೀತಿಯ ಹೆಸರಲ್ಲಿ;
ನಂಬಿಕೆಯ ನಂದಾದೀಪ ಆರಿಸಿದ ನೀನು;
ನಿನ್ನ ನೆನಪ ಹಿಡಿದು ಬಿದ್ದೆನು ದುಃಖದ ಜ್ವಾಲೆಯಲ್ಲಿ.
                                    - ಸ್ಫೂರ್ತಿ

"ನೆನಪುಗಳ ಅಳಿಸುವ ಹೋರಾಟ"

ನೆನಪಿನಳಿವಾಗಬೇಕು ನನಗೆ,
ನನ್ನೆಲ್ಲಾ ಮನದ ಕಳವಳವ ಒಮ್ಮೆಲೆ ಮರೆಯಲು;
ಶಾಂತಿಯ ಬೆಳಕು ಬೇಕು ನನಗೆ,
ನನ್ನ ಬದುಕೆಂಬ ಗೃಹದ ಅಂಧಕಾರವ ತೂರಲು.
                                      - ಸ್ಫೂರ್ತಿ

" ಸ್ನೇಹ ಎಂಬ ಬೆಸುಗೆ"

ಕುದಿಯುವ ಸೂರ್ಯನ ಕಿರಣಗಳಿಗೆ ಬಂಧ,
ತಂಪಿನ ಶಶಿಗೆ ತಂಗಾಳಿಯೇ ಸಂಬಂಧ;
ಸದಾ ಬೆರೆತಿಹುದು ಹಾಲು - ಜೇನು,
ಹಾಗೆಯೇ ಸ್ನೇಹದ ಬೆಸುಗೆಯಲ್ಲಿ ನಾನು ನೀನು.
                                         - ಸ್ಫೂರ್ತಿ

"ಪರಿಸರದ ವಿನಾಶ"

ಸಿಡಿ - ಮದ್ದುಗಳು ಸುಡುವುದು ಬದುಕನ್ನು,
ಆದರೂ ಅದರ ಮೋಹ ಬಿಡಲಿಲ್ಲ ಮಾನವನು;
ಪ್ರಾಣಿ - ಪಕ್ಷಿಗಳಿಗೆ ಹಾನಿಯನ್ನು ಮಾಡುವನು,
ಪರಿಸರದ ವಿನಾಶವನ್ನೇ ಸದಾ ಬಯಸುವನು.
                                           - ಸ್ಫೂರ್ತಿ

"ಎಲ್ಲೆಲ್ಲೂ ಬೆಳಕಿನ ರಂಗು"

ಎಲ್ಲೆಂದರಲ್ಲಿ ಜಗಮಗಿಸುತ್ತಿದೆ ಬೆಳಕಿನ ರಂಗು,
ಹಾದಿ ಬೀದಿಗಳಲ್ಲಿ ಸಿಡಿ ಮದ್ದುಗಳದ್ದೇ ಗುಂಗು;
ಮನೆಯ ಅಂಗಳದ ತುಂಬಾ ಬೆಳಕಿನ ಹಾವಳಿ,
ಮತ್ತೆ ಬಂದಿದೆ ಬೆಳಕಿನ ಹಬ್ಬ ದೀಪಾವಳಿ.
                                           - ಸ್ಫೂರ್ತಿ

" ದೀಪಂ ಜ್ಯೋತಿ ಪರಬ್ರಹ್ಮ"🕉️

ಹಣತೆ ಹಚ್ಚುತ್ತೇನೆ ನಾನೂ ಕತ್ತಲ ಸರಿಸಲು,
ಹಣತೆ ಹಚ್ಚುತ್ತೇನೆ ನಾನೂ ಮನದ ವ್ಯಥೆಯ ಮರೆಯಲು;
ಹಣತೆ ಹಚ್ಚುತ್ತೇನೆ ನಾನೂ ಖುಷಿಯ ಹಂಚಲು,
ಹಣತೆ ಹಚ್ಚುತ್ತೇನೆ ನಾನೂ ಜಯದ ಬೆಳಕ ಬೆಳಗಲು.
                                   - ಸ್ಫೂರ್ತಿ

"ದೀಪಾವಳಿ ಹಬ್ಬದ ಶುಭಾಶಯಗಳು"

ಕಷ್ಟದ ಕಗ್ಗತ್ತಲ ಸೀಳುವ ಬೆಳಕು,
ಮೂಡಿತು ಬದುಕಿನ ತುಂಬಾ ಬೆಳಕು;
ಪಸರಿಸಿತು ಹರ್ಷೋದ್ಗಾರದ ಬೆಳಕು,
ಸುಖದ ಕಡೆಗೆ ಪಯಣಿಸುವ ಬೆಳಕು.
                             - ಸ್ಫೂರ್ತಿ

"ಬನ್ನಿ ನಮ್ಮ ಬೆಟ್ಟಕ್ಕೆ"

 ನೆಲೆಸಿರಲು ಆದಿಶಕ್ತಿ ಬೆಟ್ಟದ ಮೇಲೆ,
ವಲಿವಳಿವಳು ಶ್ರದ್ಧಾ ಭಕ್ತಿಗೆ;
ಇರುವುದಿವಳ ಆರ್ಶೀವಾದ ಎಲ್ಲರ ಮೇಲೆ,
ಇಂದಿನ ಪಯಣ ದೇವಿರಮ್ಮನ ಬೆಟ್ಟದ ಕಡೆಗೆ.
                                             - ಸ್ಫೂರ್ತಿ

" ದೇವಿರಮ್ಮನಿಗೆ ನಮನ"

ವಂದಿಸುವೆ ಜಗವ ಕಾಯ್ವ ಜಗನ್ಮಾತೆಗೆ,
ದುಷ್ಟರ ಸಂಹಾರಿಸುವ ಮಾತೆ;
ಶಿಷ್ಟರ ರಕ್ಷಿಸುವ ಮಾತೆ,
ಭಕ್ತಿಯ ನಮನ ಸಲ್ಲಿಸುವೆ ದೇವಿರಮ್ಮನಿಗೆ.
                                    - ಸ್ಫೂರ್ತಿ

" ಅರ್ಥಪೂರ್ಣ ಮಾತುಗಳು"

ಭಿಕ್ಷುಕನಾಗಬೇಕು ನೀ ಬೇಡುವಾಗ,
ದಾತನಾಗಬೇಕು ನೀ ಒಯ್ಯುವಾಗ;
ಕೋರಿದೆ ಎಂದು ಕೊರಗಬೇಡ,
ಕೊಟ್ಟೆನು ಎಂದು ಹಿಗ್ಗಬೇಡ.
                                 - ಸ್ಫೂರ್ತಿ

"ಒಂದು ಹೂವಿನ ಕತೆ"

ಮುಂಜಾನೆಯ ಬೆಳಕು ಬೆಳಗಿಸಲು,
ಹೂ ಅರಳಿತು ಬದುಕಿನಂಚಿನ ಕಡೆಗೆ;
ಮುಸ್ಸಂಜೆ ಕಗ್ಗತ್ತಲು ಆವರಿಸಲು,
ಹೂ ಬಾಡಿತು ಸಾವಿನಂಚಿನ ಕಡೆಗೆ.
                      - ಸ್ಫೂರ್ತಿ

"ಸೋಲಿನ ಆ ಒಂದು ಕ್ಷಣ"

ಕಂಬನಿಯ ಕಣ್ಣಂಚು ಭಾವುಕವಾಯಿತು,
ಭಾರವಾದ ಅಂತರಂಗ ಗದ್ಗದಿತವಾಯಿತು;
ಮಾತು ಬಾರದ ಈ ಮನ ಮೂಕವಾಯಿತು,
ಉಳಿಪೆಟ್ಟಿನ ಸೋಲಿಗೆ ಬಾಳೇ ಕುಬ್ಜವಾಯಿತು.
                                             - ಸ್ಫೂರ್ತಿ

"ಪರವಶದ ಈ ಪ್ರೀತಿ"

ತೆರೆಯೇ ಇಲ್ಲದ ಅಂಬುಧಿಯ ತೀರ,
ಈ ಎದೆಯೊಳಗೆ ನೋವು ಸಾವಿರ;
ಪರವಶದ ಪ್ರೀತಿಯ ಯಾತನೆ ನಿರಂತರ,
ಹೇಳದೆ ಹೊರಟು ಹೋದೆಯಾ ನೀ ಬಲುದೂರ.
                                  - ಸ್ಫೂರ್ತಿ

" ಸ್ನೇಹ ಎಂಬ ಚಿರಕಾಲ ಸಂಬಂಧ"

ಅಲೆಗಳು ಸಾಗುವವು ಸಾಗರದ ಕಡೆಗೆ,
ನಿನ್ನ ಗೆಳೆತನ ಸಾಗುವುದು ನನ್ನ ಮನದೆಡೆಗೆ;
ಬಾನಿನಂತೆ ಅಂತ್ಯವಿಲ್ಲದ ನಮ್ಮಿ ಸ್ನೇಹ,
ನಮ್ಮಲ್ಲಿ ಎಂದೂ ಮೂಡಬಾರದು ಸಂದೇಹ.
                           - ಸ್ಫೂರ್ತಿ

Friday, November 2, 2018

ಕನ್ನಡ ರಾಜ್ಯೋತ್ಸವದ ರಣಕಹಳೆ...

ಇಂದಿನ ಕನ್ನಡದ ಪ್ರೀತಿ ತೋರಿದರೆ ಪ್ರತಿದಿನ,
ಸ್ಫುರಿಸುವುದು ಕನ್ನಡ ಸಾಹಿತ್ಯದ ಸಂಚಲನ;
ಘರ್ಜಿಸುವುದು ಕನ್ನಡದ ರಣಕಹಳೆಯ ಗಾನ,
ದಿನಂಪ್ರತಿ ಆಚರಿಸುವೆವು ಕನ್ನಡ ರಾಜ್ಯೋತ್ಸವದ ಶುಭದಿನ .
                                     - ಸ್ಫೂರ್ತಿ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು...

ನೆಲೆಸಿರುವ ಭೂದೇವಿಯ ಮಡಿಲಲ್ಲಿ,
ಗಂಗೆ,ತುಂಗೆ,ಕಾವೇರಿ,ಕೃಷ್ಣೆ ಹರಿವರಿಲ್ಲಿ;
ರನ್ನ,ಪೊನ್ನ, ದಾಸರು ತಂಗಿದ್ದರಿಲ್ಲಿ,
ಹಿಂದೂ,ಕ್ರೈಸ್ತ,ಮುಸಲ್ಮಾನ ಜೈನರಿರುವರಿಲ್ಲಿ;
ಕರುನಾಡ ಕಣ್ಮಣಿ ಆಗು ನೀ ಇಲ್ಲಿ.
  
ಗಂಗ ಕದಂಬ ಚಾಲುಕ್ಯ ಹೋರಡಿದರಿಲ್ಲಿ,
ಅಕ್ಕಮ್ಮ ಓಬವ್ವ ರಾಯಣ್ಣರ ಆತ್ಮವಿರುವುದಿಲ್ಲಿ;
ಬೇಲೂರು ಹಂಪಿಯ ಶಿಲ ಸ್ಥಾವರವಿರುವುದಿಲ್ಲಿ,
ಪುಟ್ಟಪ್ಪ ಕಣವಿಯರ ಕೃತಿ ಅರಳುವುದಿಲ್ಲಿ,
ಅಮರವಾಗು ನೀ ಈ ನಾಡಿನಲ್ಲಿ.
                                       - ಸ್ಫೂರ್ತಿ





ಕನ್ನಡ ಕಸ್ತೂರಿ...

ಕನ್ನಡ ನಾಡಿನ ನೆಲ ಜಲ ನಿನಗೆ ಉಸಿರಾಯಿತು,
ಕೆಲಸ ಮಾಡಲು ಆಂಗ್ಲ ಭಾಷೆ ನಿನ್ ಉಸಿರಾಯಿತು;
ನಾಡಿನ ಅಭಿಮಾನ ನಿನ್ನಿಂದ ಮರೆಯಾಯಿತು,
ಕನ್ನಡವೇ ನಿನ್ ಹೆಸರಿಗೆ ಆಸರೆಯಾಯಿತು.
                                    - ಸ್ಫೂರ್ತಿ

ಛಲಬಿಡದ ಪಯಣ...

ಬರಡು ಭೂಮಿಯಲ್ಲಿ ಸಾಗುವ ಛಲವೊಂದಿದೆ,
ಮನದಲ್ಲಿರೋ ನೆನಪೆಲ್ಲ ನೆಪ ಹೇಳಿ ಕುಳಿತಿದೆ;
ಸಾಧನೆಯ ಮೆಟ್ಟಿಲು ಹತ್ತಿರವಿದ್ದರೂ ದೂರವಿದ್ದಂತೆ ಕಾಣುತಿದೆ,
ಈ ಒಂಟಿ ಜೀವವೂ ಎಡಬಎಡೆಬಿ ಹೆಜ್ಜೆ ಹಾಕುತಿದೆ.
                                       - ಸ್ಫೂರ್ತಿ

ಬದುಕು ಮೂರು ದಿನಗಳ ಆಟ....

ಬದುಕೆಂಬ ಮೂರು ದಿನಗಳ ಆಟದಿ,
ಎಲ್ಲವನ್ನೂ ಪಡೆವೆನೆಂಬ ಹಠದಿ;
ಮಿತಿಯೇ ಇಲ್ಲ ಆತನ ಆಸೆಗಳಿಗೆ,
ಆದರೂ ಬೆತ್ತಲಾಗಿ ಹೋಗುವನು ಮಸಣದ ಕಡೆಗೆ.
                              ಸ್ಫೂರ್ತಿ

ರೋಮಾಂಚನ ಈ ಕನ್ನಡ..

ಪದಪುಂಜದ ಮಿಡಿತ ಕನ್ನಡ,
ಕವಿಗಳ ನರನಾಡಿ ಕನ್ನಡ;
ಕವಿತೆಗಳ ಸಾರಾಂಶ ಕನ್ನಡ,
ಕಲಾಭಿಮಾನಿಗಳ ರಸದೌತಣ ಕನ್ನಡ.
                               - ಸ್ಫೂರ್ತಿ

ಕೆಲವು ದಿನಗಳ ನೆನಪು..

ನೆನಪಿನ ಸಾಗರದಲ್ಲಿ ಮುಳುಗಿದ್ದೇನೆ,
ಎದ್ದೇಳಲು ಒದ್ದಾಡುತ್ತಿದ್ದೇನೆ;
ಗೆಲುವಿನ ಪಥ ಬೇಕಿದೆ,
ಜಯದ ಹಾದಿಗೆ ಮನ ಕಾದಿದೆ.
                              - ಸ್ಫೂರ್ತಿ

ಅಹಂ ಎಂಬ ಗರ್ವ....

ಅಹಂಕಾರವೆಂಬ ವಿಷವ ಸೇವಿಸಿ,
ಅಂತರಾತ್ಮವನ್ನು ಸುಟ್ಟು ಭಸ್ಮ ಮಾಡಿ;
ಬಣ್ಣ ಬಣ್ಣದ ಮುಖವಾಡ ಧರಿಸಿ,
ತಾನೇ ಶ್ರೇಷ್ಠವೆಂದು ಘರ್ಜಿಸುವವರ ನೋಡಿ.
                                    - ಸ್ಫೂರ್ತಿ

ಆ ನಿಷ್ಕಲ್ಮಶ ಸ್ನೇಹ...

ಕ್ಷಣಕ್ಷಣವು ಸ್ಥಾಪಿಸಿದೆವು ಸ್ನೇಹದ ಮಂದಿರ,
ಸುಖ-ದುಃಖ ನೆನಪುಗಳೇ ಇದರ ಆಗರ;
ನಮ್ಮಿಬ್ಬರ ಗೆಳೆತನದ ನಡುವೆ ಬಾರದಿರಲಿ ಅಂತರ,
ಈ ಮೈತ್ರಿಯ ಪದಗಳಿಗೆ ನೀನಾದೆ ಪ್ರೀತಿಯ ಇಂಚರ. 
                                     - ಸ್ಫೂರ್ತಿ

ಆ ನಗುವ ಹಿಂದಿರುವ ನೋವು

ಆ ನಗುವ ಹಿಂದಿರುವ ನೋವು,
ವರ್ಣಿಸಲಾಗದು ಅದರ ಭಾವನೆ;
ಮನದಲ್ಲಿ ಮೂಡಿತು ಜ್ಞಾನದ ಸಂವೇದನೆ,
ಬದುಕು ತೋರಿತು ಶಾಂತಿಯ ಪರಿವರ್ತನೆ.
                                  - ಸ್ಫೂರ್ತಿ

ಭಕ್ತಿಯ ಪರಾಕಾಷ್ಟೆಯ ನಾಡು.

ಸಹ್ಯಾದ್ರಿ ತಪ್ಪಲಿನ ಮಲೆನಾಡು,
ಪವಿತ್ರ ತುಂಗೆ ಹರಿವಳು ನೋಡು;
ವೇದ-ವ್ಯಾಸರು ನೆಲೆಸಿರುವ ಬೀಡು,
ಅದ್ವೈತ ಸಿದ್ಧಾಂತ ಸಾರಿದ ನಾಡು;
ತಾಯಿ ಶಾರದೆಯ ಮುಂದೆ ವಿದ್ಯೆಯ ಬೇಡು.
                                          - ಸ್ಫೂರ್ತಿ

ಶಾಂತಿಯ ಮಾತು...

ಉದಯವಾಯಿತು ಬೆಳಕಿನ ಕಾಂತಿ,
ಮುದ ನೀಡಿತು ಮನಸ್ಸಿಗೆ ಶಾಂತಿ;
ಹಬ್ಬಿತು ಎಲ್ಲರಿಗೂ ದೀಪದ ಶಕ್ತಿ,
ಆತ್ಮಕ್ಕೆ ದೊರಕಿತು ಜ್ಞಾನದ ಮುಕ್ತಿ.
                                   - ಸ್ಫೂರ್ತಿ

Thursday, October 11, 2018

ಏಕಾಂಗಿಯ ಕೂಗು..,🚶

ನೊಂದ ಮನದ ತುಂಬಾ ಹರಡಿತ್ತು ನೋವು,
ಹಂಚಿಕೊಳ್ಳುವ ಹೆಗಲು ಎಲ್ಲಿ ಸಿಗುತ್ತೆ ಹೇಳು??
ನೆನಪುಗಳನ್ನು ಹಿಂಬಾಲಿಸುತ್ತಿತ್ತು ಈ ನನ್ನ ಮನವು,
ಕೊನೆಗೂ ಮರಳಿತು ನನ್ನ ಏಕಾಂತದ ಬಾಳು!!
                                            - ಸ್ಫೂರ್ತಿ

ಪ್ರೀತಿಯ ಸಿಂಚನ ♥️

ಪ್ರೀತಿಯೆಂಬ ನಾವೆಯನು ನಾ ತಂದರೆ,
ಅದನ್ನು ನಡೆಸುವ ಅಂಬಿಗನು ನೀ ಆದರೆ;
ನಂಬಿಕೆ ಎಂಬ ಸರೋವರದಿ ನಮ್ಮಿ ಸಂಚಾರ,
ಸಾಗಲಿದೆ ಗೆಳೆಯ ದೂರ ಬಹುದೂರ!!
                                      - ಸ್ಫೂರ್ತಿ

Monday, October 8, 2018

ನೆನಪಿನ ಬುತ್ತಿ..,

ನೀ ದೂರ ಹೋದರೇನು??
ನಿನ್ನ ನೆನಪಿನ ಬುತ್ತಿ ಇಲ್ಲವೇನು??
ಬೇರೇನೂ ಬೇಕಿಲ್ಲ ಈ ಜೀವಕಿನ್ನು;
ಮರಳಿ ಬರಬಾರದೇನು ಒಮ್ಮೆ ನೀನು??
               ‌                           - ಸ್ಫೂರ್ತಿ

ಕಾಯುವ ತವಕ..,😊

ಕಾದಿರುವೆ ನಾ ಕಡಲಂತೆ,
ಸೇರು ಬಾ ನದಿಯಂತೆ;
ಹಾಡುವೆ ನಾ ಕೋಗಿಲೆಯಂತೆ,
ನರ್ತಿಸು ನೀ ನವಿಲಂತೆ..
                                      - ಸ್ಫೂರ್ತಿ

ಕನಸಿನ ಮಾತು..,😊

ಓ ಕನಸೆ ನಿನೊಂದು ಮಾಯೆ,
ಬಣ್ಣಿಸಲಾಗದು ಈ ನಿನ್ನ ಛಾಯೆ;
ದಿನವೂ ಬಂದು ಹೋಗುವೆ ಏಕೆ??
ಬಂದರು ನನಸಾಗದೆ ಹೋಗುವೆ ಏಕೆ??
                                     - ಸ್ಫೂರ್ತಿ

Friday, October 5, 2018

ಕಲಿಯ ಬೇಕು ಜೀವನ ಎಂಬ ಪಾಠವನು...🕉️😃ಠಠ

ಪುಸ್ತಕದ ಪಾಠಗಳು ಚಿರಾಯುಷ್ಯ,
ಜೀವನದ ಪಾಠಗಳು ಚಿರಾಯುಷ್ಯ;
ತಿದ್ದಿ-ತೀಡಬೇಕು ಬದುಕಿನ ಕಲೆ,
ಸಿಕ್ಕೇ-ಸಿಗುವುದು ಏಳ್ಗೆಯ ನೆಲೆ.
                                   - ಸ್ಫೂರ್ತಿ

Thursday, October 4, 2018

ತಾಯಿ ಎಂಬ ದೇವತೆ....♥️🙏🏻

ಅಕ್ಕರೆಯ ಕಡಲು ತಾಯಿಯ ಮಡಿಲು,
ಸದಾ ಅವಳೇ ಬೇಕೆನ್ನುವ ದಿಗಿಲು;
ನಿಷ್ಕಲ್ಮಶ ಹೃದಯದ ಮುಗಿಲು,
ಪ್ರೀತಿ, ಮಮಕಾರವೇ ಅವಳ ಕೊನೆಯಿಲ್ಲದ ಓಲವು!!!
                             - ಸ್ಫೂರ್ತಿ

Wednesday, October 3, 2018

ಕ್ರೂರ ಜಗತ್ತು...😏

ಸ್ವಾರ್ಥ ಜನಗಳ ಜಗತ್ತಿದು,
ದ್ವೇಷ ,ಪಾಪಿಗಳ ಲೋಕವಿದು;
ಪ್ರೀತಿ ,ವಿಶ್ವಾಸಕ್ಕೆ ಇಲ್ಲಿಲ್ಲ ಬೆಲೆ,
ಸಹಾಯ ,ತ್ಯಾಗಕ್ಕೆ ಇಲ್ಲಿಲ್ಲ ಸೆಲೆ.

ಹೆಣ್ಣಿನ ಮಾತುಗಳು..🙎

ವಟುವಿಗೆ ಜನ್ಮವಿಟ್ಟವಳು ಹೆಣ್ಣಲ್ಲವೇ??
ಮನೆಯ ನಂದಾದೀಪ ಬೆಳಗುವವಳು ಹೆಣ್ಣಲ್ಲವೇ??
ನೋವ ಮರೆಸಿ ಸಂತಸ ತೋರುವವಳು ಹೆಣ್ಣಲ್ಲವೇ??
ಆದರೂ ಅವಳ ಶೋಷಣೆಗೆ ಅಂತ್ಯವಿಲ್ಲವೇಕೆ??
                                    - ಸ್ಫೂರ್ತಿ

ನೋವಿನ ಆ ‌ದಿನಗಳು....😞

ಕಣ್ಣ ಕಂಬನಿಯ ಹಿಂದಿರುವ ಮಾತು,
ಭಾರವಾದ ಮನದ ಹಿಂದಿರುವ ನೋವು;
ಅಳಿಸಲಾಗದ ನೆನಪುಗಳ ಹಿಂದಿರುವ ಸಾವು,
ಕೊನೆಗೂ ಧೈರ್ಯದ ಹೆಜ್ಜೆ ಇಟ್ಟ ಗುರುತು....
                                          - ಸ್ಫೂರ್ತಿ

ಗುರುವಿನ ಜ್ಞಾನದ ಬೆಳಕು...🕉️🙏🏻🕉️

ಅರಿತೆನು ನಿಮ್ಮ ಜ್ಞಾನದ ಬೆಳಕನು,
ಮನದ ಅಂತರಾಳದಲ್ಲಿ ಕಂಡೆನು ಅದರ ಬಿಂಬವನು;
ನನ್ನ ಕವಿತೆಗಳಿಗೆ ನೀವಾದಿರಿ ಸ್ಫೂರ್ತಿ,
ತಂದೆ ತೀರುವೆ ನಿಮ್ಮ ಹೆಸರಿಗೆ ಕೀರ್ತಿ...
                                 - ಸ್ಫೂರ್ತಿ

ಸಂಜೆಯ ಹೊನಲು...🌥️

ಮುಸ್ಸಂಜೆಯ ತಿಳಿಗೆಂಪಿನ ಗಗನ,
ಪಡುವಣದ ಕಡೆಗೆ ಸೂರ್ಯನ ಪಯಣ;
ಬೆಳದಿಂಗಳ ಶಶಿಯ ಆಗಮನ,
ಈ ಹಗಲಿರುಳುಗಳ ಮಧ್ಯೆ ನಮ್ಮ ಜಂಜಾಟದ ಜೀವನ....
                                   - ಸ್ಫೂರ್ತಿ

ಮನದ ಮಾತು ಕವಿತೆಗಳ ಮೂಲಕ.... ✍🏻

ಬರೆದೆ ನಾ ಒಂದು ಕವಿತೆ,
ಅದರ ಭಾವಲಹರಿಯ ನಾ ಅರಿತೆ;
ಅದಾಯಿತು ನನ್ನ ಬದುಕಿಗೆ ಹಣತೆ,
ಮೂಡಿಸಿತು ಮನದಲ್ಲಿ ದ್ರುಢತೆ,
ನನ್ನ ಬದುಕಿಗೆ ಸಿಕ್ಕಿತು ಸಾರ್ಥಕತೆ...
                                     - ಸ್ಫೂರ್ತಿ

ಕನಸು ನನಸಿನ ಮಧ್ಯೆ ಜೀವನ...,😊

ಮರೆಯಾಯ್ತು ನೋವು,
ಹಗುರಾಯ್ತು ಮನವೂ;
ಚಿಗುರಾಯ್ತು ಕನಸು,
ಹಸಿರಾಯ್ತು ನನಸು...
                          - ಸ್ಫೂರ್ತಿ

ಮುಂಜಾನೆಯ ಶುಭೋದಯ....🙏🏻

ಬೆಳಗ ಕಾಯ್ವ ಹಿಮದ ತಂಪು,
ಚಿಲಿಪಿಲಿ ಹಕ್ಕಿಗಳ ಮಧುರವಾದ ಇಂಪು;
ಪೂರ್ವದ ಬಾಗಿಲಲ್ಲಿ ರವಿಯ ಉದಯ,
ಎಲ್ಲರಿಗೂ ಮುಂಜಾನೆಯ ಶುಭೋದಯ...
                                        - ಸ್ಫೂರ್ತಿ

ನೆನಪು ಎಂಬ ಮಾಯೆಯ ಮಾತು....☹️

ನಿನ್ನ ನೆನಪಿನ ಸಾಗರವನ್ನು,
ಇಂಗಿಸಲು ಆಗುತ್ತಿಲ್ಲ ನನಗಿನ್ನು;
ಬಾಡಿ ಹೋಯಿತು ಈ ಮನವೂ,
ಬರಿದಾಯಿತು ಈ ಹೃದಯವೂ.... 
                                    - ಸ್ಫೂರ್ತಿ

Tuesday, October 2, 2018

ಗೆಳೆತನದ ಸಾರ್ಥಕತೆ....👬👫👭

ಸಾರ್ಥಕವಾಯಿತು ನೀ ಕೊಟ್ಟ ಸ್ನೇಹ,
ಬಾನಂಗಳದಂತೆ ನಮ್ಮಿಬ್ಬರ ನೇಹಾ;
ಒಡಕಾಗದಿರಲಿ ನಮ್ಮಿ ತನು-ಮನ,
ಅವಿಸ್ಮರಣೀಯವಾಗಲಿ ನಮ್ಮಿ ಗೆಳೆತನ.
                                          - ಸ್ಫೂರ್ತಿ 

ಮಾಸದ ನೆನಪುಗಳ ಮಧ್ಯೆ ಸಾಧನೆಯ ಹಾದಿ...👣

ದೂರದ ಕಡಲ ಅಲೆಯ ಶಬ್ಧಗಳು,
ಎಲ್ಲೋ ಒಂದು ಕಡೆ ಮಾಸದ ನೆನಪುಗಳು;
ಬದುಕಲೇ ಬೇಕು ಎನ್ನುವ ಮನದ ಮಾತುಗಳು,
ಸಾಧನೆಯ ಹಾದಿಗೆ ಕಾದಿದೆ ಸಾವಿರ ದಾರಿಗಳು.
                                      - ಸ್ಫೂರ್ತಿ

ಬದುಕಿನ ಸತ್ಯಾಂಶ...😊

ಕಡಲಿನ ನೀರಿನಂತೆ ಜೀವನ,
ಜೇನಿನ ಹನಿಯಂತೆ ಬದುಕಿದರೆ ಪಾವನ;
ಹಾವಿನ ವಿಷದಂತೆ ಬದುಕಿದರೆ ಕಲ್ಮಶ,
ಇವೆರಡೂ ಇಲ್ಲದಿದ್ದರೆ ಜೀವನವೇ ಕಲುಷ!!
                                    - ಸ್ಫೂರ್ತಿ

ಸತ್ಯದ ತಿಳಿ ಸಾಲುಗಳು...🔥🔥

ನಿನ್ನೊಬ್ಬರಿಗೆ ಸಹಾಯ ಮಾಡು,
ಆದರೆ ಗುಲಾಮನಾಗಬೇಡ;
ಎಲ್ಲರನ್ನು ಪ್ರೀತಿಸು ಆದರೆ,
ಅವರನ್ನೇ ಪ್ರಪಂಚಮಾಡಿಕೊಳ್ಳಬೇಡ.
                                     - ಸ್ಫೂರ್ತಿ

ಸಾಧನೆಯ ಹಂಬಲದ ಮಾತು.....😊

ಸೋತೆ ಎಂದು ಕುಗ್ಗಬೇಡ,
ನಾಳೆಯ ಮಾತು ನಂಬಬೇಡ;
ಸಾಧನೆಯ ಶಿಖರ ನಿನ್ನಲ್ಲಿದೆ,
ಸಾಧಿಸುವ ಹಂಬಲ ನಿನ್ನಲ್ಲಿದೆ!
                                  - ಸ್ಫೂರ್ತಿ

ಜೀವನದ ಕಟು ಸತ್ಯದ ಸಾಲುಗಳು....

ಜೀವನದ ಸತ್ಯ ತಿಳಿಯುವುದು ಕಷ್ಟದಲ್ಲಿದ್ದಾಗ,
ಯಾರು ನಮ್ಮವರಲ್ಲ ನೋವಿನಲ್ಲದ್ದಾಗ;
ಖುಷಿಯಲ್ಲಿರುವಾಗ ಬರುವರು ಎಲ್ಲಾ,
ದುಃಖದಲ್ಲಿರುವಾಗ ಮೂಸುವರು ಇಲ್ಲಾ..
                                    - ಸ್ಫೂರ್ತಿ