Thursday, December 13, 2018

"ಛಿದ್ರಗೊಂಡ ಸಂಬಂಧ"

ನಮ್ಮಿಬ್ಬರ ಮಧ್ಯೆ ನೀರವ ಮೌನ ಆವರಿಸಿತು,
ಬಾಂಧವ್ಯದ ಸರಪಳಿ ಸಾಲಾಗಿ ಕಳಚಿತು;
ನಂಬಿಕೆಯ ಗಾಜು ನುಚ್ಚು ನೂರಾಯಿತು,
ಸ್ನೇಹದ ಸಲುಗೆ ಸುಟ್ಟು ಭಸ್ಮವಾಯಿತು;
ಪ್ರೀತಿಯ ಕನಸು ನನಸಾಗದೆ ಛಿದ್ರವಾಯಿತು.
                                              - ಸ್ಫೂರ್ತಿ

"ನಡತೆ"

ಪಡೆಯಬಹುದು ಸಂಪತ್ತನ್ನು ಪ್ರತಿದಿನವೂ,
ಅದ ತರುವುದು ನಮಗೆ ಅಂತಸ್ತನ್ನು ದಿನ ದಿನವೂ;
ಕಲಿಯಬಹುದು ವಿದ್ಯೆಯನು ಸದಾಕಾಲ,
ಅದ ತಿಳಿಸುವುದು ಅರಿವನು ಚಿರಕಾಲ;
ಆದರೆ;
ಗಳಿಸಬೇಕು ಒಳ್ಳೆಯ ನಡತೆಯನ್ನು ಕ್ಷಣ ಕ್ಷಣ,
ಅದ ಗೌರವಿಸುವುದು ವ್ಯಕ್ತಿಯನು ತಕ್ಷಣ.
                                    - ಸ್ಫೂರ್ತಿ

"ಕನಸೆಂಬ ಪ್ರೀತಿ"

ಕನಸೆಂಬ ಪ್ರೀತಿಯ ಸಂತೆಯಲ್ಲಿ,
ಯಾರಿಗೂ ಸಿಗದೆ ಕಳೆದು ಹೋದೆ ನಾನು;
ನೀ ಬಂದು ಸೇರುವೆ ಎಂಬ ಭ್ರಮೆಯಲ್ಲಿ,
ಹಗಲಿರುಗಳ ಎಣಿಸುತ್ತಾ ಕುಳಿತೆ ನಾನು.
                                  - ಸ್ಫೂರ್ತಿ

"ಸ್ನೇಹ ಎಂಬ ಕವನ"

ರಚಿಸಿದೆವು ಸ್ನೇಹ ಎಂಬ ಕವನವನು,
ಪ್ರತಿ ಪದಗಳಲ್ಲಿ ಪ್ರೀತಿಯ ಜೇನ ತುಂಬಿದೆ ನೀನು;
ಪ್ರತಿ ಸಾಲುಗಳಲ್ಲಿ ಸ್ನೇಹದ ರುಚಿ ಸವೆದೆ ನಾನು,
ಸ್ಟಾರಸ್ಯ ತುಂಬಿದ ಗೆಳತಿ ಆಗು ನೀನು.
                                                 - ಸ್ಫೂರ್ತಿ

"ಹರಿಯುವ ನೀರು"

ಜುಳು ಜುಳನೆ  ಹರಿಯುವೆ ನೀನು,
ಎಲ್ಲಿಗೆ ಹರಿದು ಹೋಗುವೆ ನೀನು?
ಯಾರ ದಾಹವನ್ನು ತೀರಿಸುವೆ ನೀನು?
ಯಾವ ಕಡಲನು ಸೇರುವೆ ನೀನು?
                                 - ಸ್ಫೂರ್ತಿ

"ಲೋಕಕ್ಕೆ ನಿನ್ನ ಕೊಡುಗೆ ಆಗಬೇಕು ಅಜರಾಮರ"

ಬಾಳಬೇಕು ನೀ ಜಗವೇ ಬಾಗೋತರ,
ಸಾಯಬೇಕು ನೀ ಸ್ಮಶಾನ ಅಳೋತರ;
ಹೆಸರಾಗಬೇಕು ನೀ ಯವರಾಜ ಮರುಗೋತರ;
ಆಗಬೇಕು ನೀ ಈ ಲೋಕಕ್ಕೆ ಅಜರಾಮರ.
                                          - ಸ್ಫೂರ್ತಿ

"ಬದುಕೆಂಬ ವೀಣೆ"

ಭಾವನೆಗಳ ವೀಣೆ ಮೀಟಿಸಿ,
ಸವಿನುಡಿಗಳ ಸ್ವರ ಹೊರಡಿಸಿ;
ಪ್ರೀತಿಯೆಂಬ ರಾಗವ ಸೇರಿಸಿ,
ಬಾಳೆಂಬ ಋತುಗಾಯನ ಹರಿಸಿ;
ಪರರ ಬದುಕನು ಹಸನಾಗಿಸಿ.
                                - ಸ್ಫೂರ್ತಿ

"ನನಸಾಗದ ಕನಸು"

ನನ್ನ ಪ್ರೀತಿಯೆಂಬ ಒಗಟಿಗೆ,
ಸಿಗದೆ ಇರೋ ಉತ್ತರ ನೀನು;
ನನ್ನ ಕನಸೆಂಬ ಸ್ವಪ್ನದ ಬದುಕಿಗೆ,
ಎಂದೂ ನನಸಾಗದ ಕನಸು ನೀನು!
                                - ಸ್ಫೂರ್ತಿ

"ನೈಜ ಸತ್ಯ"

ಬಡವ ಎಂದು ಕುಗ್ಗಬೇಡ,
ಬಲ್ಲಿದ ಎಂಬ ಹಿಗ್ಗಬೇಡ;
ಸಂಕಷ್ಟ ಎಂದೂ ಸಾವಲ್ಲ,
ಸಂತಸ ಎಂದೂ ಅಚಲವಲ್ಲ.
                            - ಸ್ಫೂರ್ತಿ

"ವೇದನೆಯ ಯೋಚನೆ"

ಬದುಕಲು ಬೇಕು ಭಾವನೆ,
ಭಾವನೆಗಳ ತುಂಬಾ ನಿವೇದನೆ;
ನಿವೇದನೆಯನ್ನು ಕಾಡುವ ವೇದನೆ,
ನನಗಾಗಿದೆ ಅದರದೆ ಯೋಚನೆ.
                                 - ಸ್ಫೂರ್ತಿ

"ಭಗ್ನ ಪ್ರೇಮಿಯ ನೋವು"

ಕಾರಣವೇ ಇಲ್ಲದೆ ಬಿಟ್ಟು ಹೋದೆ ನೀ,
ಕಾರಣವ ಹುಡುಕುತ ನಿನ್ನ ಹಿಂದೆ ನಿಂತೆ ನಾ;
ಒಮ್ಮೆ ಆದರೂ ತಿರುಗಿ ನೋಡು ನೀ,
ನಿನ್ನ ನೆನಪಲ್ಲೇ ಸಾಯುವ ಭಗ್ನ ಪ್ರೇಮಿ ನಾ.
                                          - ಸ್ಫೂರ್ತಿ

"ಸ್ವಾರ್ಥ ಜನಗಳ ಧರ್ಮ"

ಜೀವನದಲ್ಲಿ ನಾ ಕಂಡೆ ಪಾಪಿಗಳ ಸಂತೆ,
ಸಿಕ್ಕಿತು ನನಗೆ ಮದ-ಮತ್ಸರದ ಕಂತೆ;
ಎಲ್ಲರ ಮನದಲ್ಲಿ ಆಸೆಗಳ ಚಿಂತೆ,
ಎತ್ತ ಸಾಗಲಿ ಎಂದು ಮೂಕಳಾಗಿ ನಿಂತೆ.
                                   - ಸ್ಫೂರ್ತಿ

"ನಂಬಿಕೆ ದ್ರೋಹ"

ಇಟ್ಟೆನು ನಿನ್ನ ಮೇಲೆ ನಂಬಿಕೆಯನು,
ಅದ ಉಳಿಸಿಕೊಳ್ಳುವ ನಟನೆ ಮಾಡಿದೆ ನೀನು;
ಕಂಡೆನು ನಿನ್ನ ಆ ಅಪನಂಬಿಕೆಯನು,
ಅದ ತಿಳಿದು ಮೂರ್ಖಳಾಗಿ ಕುಳಿತೆ ನಾನು.
                                        - ಸ್ಫೂರ್ತಿ

"ಪ್ರತಿ ಒಬ್ಬ ನಿಜ ಪ್ರೇಮಿಯ ನೋವು"

ವೃತ್ತಿಯಲ್ಲಿ ಬಡವನಾದೆನೆಂದು ನಾನು,
ತೊರೆಯದಿರು ಓ ನನ್ನ ಗೆಳತಿಯೇ;
ಪ್ರೀತಿಯ ಹಂಚುವಲ್ಲಿ ಸಿರಿವಂತನು ನಾನು,
ಎಂದೂ ಕಡೆಗಣಿಸದಿರು ಓ ನನ್ನ ಗೆಳತಿಯೇ.
                                        - ಸ್ಫೂರ್ತಿ

"ಜಗತ್ತಿನ ನಿಜ ರೂಪ"

ಎಲ್ಲೆಲ್ಲೂ ಹರಡುತ್ತಿದೆ ಜಾತಿಯ ಹೊಗೆ,
ತನು - ಮನದಲ್ಲಿ ಕುದಿಯುತ್ತಿದೆ ಸ್ವಾರ್ಥದ ಹಗೆ;
ಎತ್ತ ನೋಡಿದರಲ್ಲಿ ಬಡವ,ಶ್ರೀಮಂತ ಎಂಬ ಬಗೆ,
ಕಾಣ ಸಿಗುವುದೇ ಇಲ್ಲಿ ಪ್ರೀತಿ ಮಮಕಾರದ ನಗೆ???
                                      - ಸ್ಫೂರ್ತಿ

"ಒಡಕಾಗಿರುವ ಹೃದಯದ ಮಾತು"

ಭಾವನೆಗಳಿಗೆ ಬೆಲೆ ಕೊಡದ ನೀನು,
ಬಣ್ಣ ಬಳಿದು ಹೋದೆ ಪ್ರೀತಿಯ ಹೆಸರಲ್ಲಿ;
ನಂಬಿಕೆಯ ನಂದಾದೀಪ ಆರಿಸಿದ ನೀನು;
ನಿನ್ನ ನೆನಪ ಹಿಡಿದು ಬಿದ್ದೆನು ದುಃಖದ ಜ್ವಾಲೆಯಲ್ಲಿ.
                                    - ಸ್ಫೂರ್ತಿ

"ನೆನಪುಗಳ ಅಳಿಸುವ ಹೋರಾಟ"

ನೆನಪಿನಳಿವಾಗಬೇಕು ನನಗೆ,
ನನ್ನೆಲ್ಲಾ ಮನದ ಕಳವಳವ ಒಮ್ಮೆಲೆ ಮರೆಯಲು;
ಶಾಂತಿಯ ಬೆಳಕು ಬೇಕು ನನಗೆ,
ನನ್ನ ಬದುಕೆಂಬ ಗೃಹದ ಅಂಧಕಾರವ ತೂರಲು.
                                      - ಸ್ಫೂರ್ತಿ

" ಸ್ನೇಹ ಎಂಬ ಬೆಸುಗೆ"

ಕುದಿಯುವ ಸೂರ್ಯನ ಕಿರಣಗಳಿಗೆ ಬಂಧ,
ತಂಪಿನ ಶಶಿಗೆ ತಂಗಾಳಿಯೇ ಸಂಬಂಧ;
ಸದಾ ಬೆರೆತಿಹುದು ಹಾಲು - ಜೇನು,
ಹಾಗೆಯೇ ಸ್ನೇಹದ ಬೆಸುಗೆಯಲ್ಲಿ ನಾನು ನೀನು.
                                         - ಸ್ಫೂರ್ತಿ

"ಪರಿಸರದ ವಿನಾಶ"

ಸಿಡಿ - ಮದ್ದುಗಳು ಸುಡುವುದು ಬದುಕನ್ನು,
ಆದರೂ ಅದರ ಮೋಹ ಬಿಡಲಿಲ್ಲ ಮಾನವನು;
ಪ್ರಾಣಿ - ಪಕ್ಷಿಗಳಿಗೆ ಹಾನಿಯನ್ನು ಮಾಡುವನು,
ಪರಿಸರದ ವಿನಾಶವನ್ನೇ ಸದಾ ಬಯಸುವನು.
                                           - ಸ್ಫೂರ್ತಿ

"ಎಲ್ಲೆಲ್ಲೂ ಬೆಳಕಿನ ರಂಗು"

ಎಲ್ಲೆಂದರಲ್ಲಿ ಜಗಮಗಿಸುತ್ತಿದೆ ಬೆಳಕಿನ ರಂಗು,
ಹಾದಿ ಬೀದಿಗಳಲ್ಲಿ ಸಿಡಿ ಮದ್ದುಗಳದ್ದೇ ಗುಂಗು;
ಮನೆಯ ಅಂಗಳದ ತುಂಬಾ ಬೆಳಕಿನ ಹಾವಳಿ,
ಮತ್ತೆ ಬಂದಿದೆ ಬೆಳಕಿನ ಹಬ್ಬ ದೀಪಾವಳಿ.
                                           - ಸ್ಫೂರ್ತಿ

" ದೀಪಂ ಜ್ಯೋತಿ ಪರಬ್ರಹ್ಮ"🕉️

ಹಣತೆ ಹಚ್ಚುತ್ತೇನೆ ನಾನೂ ಕತ್ತಲ ಸರಿಸಲು,
ಹಣತೆ ಹಚ್ಚುತ್ತೇನೆ ನಾನೂ ಮನದ ವ್ಯಥೆಯ ಮರೆಯಲು;
ಹಣತೆ ಹಚ್ಚುತ್ತೇನೆ ನಾನೂ ಖುಷಿಯ ಹಂಚಲು,
ಹಣತೆ ಹಚ್ಚುತ್ತೇನೆ ನಾನೂ ಜಯದ ಬೆಳಕ ಬೆಳಗಲು.
                                   - ಸ್ಫೂರ್ತಿ

"ದೀಪಾವಳಿ ಹಬ್ಬದ ಶುಭಾಶಯಗಳು"

ಕಷ್ಟದ ಕಗ್ಗತ್ತಲ ಸೀಳುವ ಬೆಳಕು,
ಮೂಡಿತು ಬದುಕಿನ ತುಂಬಾ ಬೆಳಕು;
ಪಸರಿಸಿತು ಹರ್ಷೋದ್ಗಾರದ ಬೆಳಕು,
ಸುಖದ ಕಡೆಗೆ ಪಯಣಿಸುವ ಬೆಳಕು.
                             - ಸ್ಫೂರ್ತಿ

"ಬನ್ನಿ ನಮ್ಮ ಬೆಟ್ಟಕ್ಕೆ"

 ನೆಲೆಸಿರಲು ಆದಿಶಕ್ತಿ ಬೆಟ್ಟದ ಮೇಲೆ,
ವಲಿವಳಿವಳು ಶ್ರದ್ಧಾ ಭಕ್ತಿಗೆ;
ಇರುವುದಿವಳ ಆರ್ಶೀವಾದ ಎಲ್ಲರ ಮೇಲೆ,
ಇಂದಿನ ಪಯಣ ದೇವಿರಮ್ಮನ ಬೆಟ್ಟದ ಕಡೆಗೆ.
                                             - ಸ್ಫೂರ್ತಿ

" ದೇವಿರಮ್ಮನಿಗೆ ನಮನ"

ವಂದಿಸುವೆ ಜಗವ ಕಾಯ್ವ ಜಗನ್ಮಾತೆಗೆ,
ದುಷ್ಟರ ಸಂಹಾರಿಸುವ ಮಾತೆ;
ಶಿಷ್ಟರ ರಕ್ಷಿಸುವ ಮಾತೆ,
ಭಕ್ತಿಯ ನಮನ ಸಲ್ಲಿಸುವೆ ದೇವಿರಮ್ಮನಿಗೆ.
                                    - ಸ್ಫೂರ್ತಿ

" ಅರ್ಥಪೂರ್ಣ ಮಾತುಗಳು"

ಭಿಕ್ಷುಕನಾಗಬೇಕು ನೀ ಬೇಡುವಾಗ,
ದಾತನಾಗಬೇಕು ನೀ ಒಯ್ಯುವಾಗ;
ಕೋರಿದೆ ಎಂದು ಕೊರಗಬೇಡ,
ಕೊಟ್ಟೆನು ಎಂದು ಹಿಗ್ಗಬೇಡ.
                                 - ಸ್ಫೂರ್ತಿ

"ಒಂದು ಹೂವಿನ ಕತೆ"

ಮುಂಜಾನೆಯ ಬೆಳಕು ಬೆಳಗಿಸಲು,
ಹೂ ಅರಳಿತು ಬದುಕಿನಂಚಿನ ಕಡೆಗೆ;
ಮುಸ್ಸಂಜೆ ಕಗ್ಗತ್ತಲು ಆವರಿಸಲು,
ಹೂ ಬಾಡಿತು ಸಾವಿನಂಚಿನ ಕಡೆಗೆ.
                      - ಸ್ಫೂರ್ತಿ

"ಸೋಲಿನ ಆ ಒಂದು ಕ್ಷಣ"

ಕಂಬನಿಯ ಕಣ್ಣಂಚು ಭಾವುಕವಾಯಿತು,
ಭಾರವಾದ ಅಂತರಂಗ ಗದ್ಗದಿತವಾಯಿತು;
ಮಾತು ಬಾರದ ಈ ಮನ ಮೂಕವಾಯಿತು,
ಉಳಿಪೆಟ್ಟಿನ ಸೋಲಿಗೆ ಬಾಳೇ ಕುಬ್ಜವಾಯಿತು.
                                             - ಸ್ಫೂರ್ತಿ

"ಪರವಶದ ಈ ಪ್ರೀತಿ"

ತೆರೆಯೇ ಇಲ್ಲದ ಅಂಬುಧಿಯ ತೀರ,
ಈ ಎದೆಯೊಳಗೆ ನೋವು ಸಾವಿರ;
ಪರವಶದ ಪ್ರೀತಿಯ ಯಾತನೆ ನಿರಂತರ,
ಹೇಳದೆ ಹೊರಟು ಹೋದೆಯಾ ನೀ ಬಲುದೂರ.
                                  - ಸ್ಫೂರ್ತಿ

" ಸ್ನೇಹ ಎಂಬ ಚಿರಕಾಲ ಸಂಬಂಧ"

ಅಲೆಗಳು ಸಾಗುವವು ಸಾಗರದ ಕಡೆಗೆ,
ನಿನ್ನ ಗೆಳೆತನ ಸಾಗುವುದು ನನ್ನ ಮನದೆಡೆಗೆ;
ಬಾನಿನಂತೆ ಅಂತ್ಯವಿಲ್ಲದ ನಮ್ಮಿ ಸ್ನೇಹ,
ನಮ್ಮಲ್ಲಿ ಎಂದೂ ಮೂಡಬಾರದು ಸಂದೇಹ.
                           - ಸ್ಫೂರ್ತಿ