Sunday, January 20, 2019

ಹಂಪಿಯ ಗತ ವೈಭವ

ಕಲ್ಲು ಬಂಡೆಗಳ ಭಗ್ನವಾದ ಸಂಪು,
ಆಲಿಸುತ್ತಿದೆ ವಿಜಯನಗರ ಸಾಮ್ರಾಜ್ಯದ ಇಂಪು;
ಕೈ ಬೀಸಿ ಕರೆಯುತ್ತಿದೆ ಗತ ವೈಭವ ತಂಪು,
ಮನ ಸೆಳೆಯುತ್ತಿದೆ ಹಂಪಿಯ ಐತಿಹಾಸಿಕದ ಕಂಪು.
                          - ಸ್ಫೂರ್ತಿ

ನೀರೀಕ್ಷಣೆ

ಕೀಚಕರ ಜಗತ್ತಿನಲ್ಲಿ ಮುಗ್ಧತೆಯ ಜೀವಿಯಾದೆ,
ಹಂತಕರೆಂಬ ರಕ್ಕಸರ ಬಲೆಯಲ್ಲಿ ಸಿಲುಕಿದೆ;
ಅಹಾರವೆಂಬ ಬಯಕೆಗೆ ನೀ ನೀರೀಕ್ಷಿಸಿದೆ,
ಸಿಕ್ಕರು ಸಿಗದಿದ್ದರೂ ನೀ ಮೌನಿಯಾದೆ. 
                            - ಸ್ಫೂರ್ತಿ

ಮಾಗಿಯ ಚಳಿ

ಮುಗಿಲ ತುಂಬೆಲ್ಲಾ ಇಬ್ಬನಿಯ ಕಡು ನರ್ತನ,
ಮರದ ರೆಂಬೆ ಕೊಂಬೆಯಲ್ಲಾ ಪಕ್ಷಿಗಳ ಗಾಯನ;
ಭೂವಿಯ ತುಂಬಾ ವಿಧ ವಿಧ ಪುಷ್ಪದ ಸಂಮೋಹನ,
ಮಾಗಿಯ ಚಳಿಯಲ್ಲಿ ಬಿಸಿ ಬಿಸಿ ಕಾಫಿಯ ಪರಿಮಳ,
ಸಿಗುವುದು ನಮಗೆ ಇಂತಹ ಅವಕಾಶ ಬಲು ವಿರಳ.
                                  - ಸ್ಫೂರ್ತಿ

ಆಗಬೇಕು ನಡತೆಯಲ್ಲಿ ಶ್ರೀಮಂತ

ನೀನು ಮಾಡುವ ತಪ್ಪಿಗೆ ನೀನೇ ಸಿರಿವಂತ,
ಅದೆಲ್ಲವನ್ನೂ ಸಮ್ಮತಿಸುವನು ಆ ಭಗವಂತ;
ಅರಿಷಡ್ವರ್ಗಗಳನ್ನು ಬಿಟ್ಟರೆ ನೀ,
ಆಗುವೆ ಈ ಜಗದೊಳಗೆ ಶ್ರೀಮಂತ.
                        - ಸ್ಫೂರ್ತಿ

ಸಂಕ್ರಾಂತಿ

ಸವಿಯಬೇಕು ಎಳ್ಳು ಬೆಲ್ಲವ,
ಹೀಗಿರಬೇಕು ಕಬ್ಬಿನ ಸ್ವಾದವ;
ಮರೆಯಬೇಕು ದ್ವೇಷ,ವೈಮನಸ್ಯವ,
ಹರಡಬೇಕು ಪ್ರೀತಿ,ಮಮಕಾರವ;
ಸಂತೋಷದಿಂದ ಆಚರಿಸಬೇಕು ಸಂಕ್ರಾಂತಿ ಹಬ್ಬವ.
                              - ಸ್ಫೂರ್ತಿ

ಹೆತ್ತವರ ಪ್ರೀತಿಯೇ ಶಾಶ್ವತ

ಕಾಣದ ಪ್ರೀತಿಗೆ ಕೈವೊಡ್ಡುವರು ಎಲ್ಲಾ,
ಕಾಣವ ಪ್ರೀತಿಯನು ಹಂಬಲಿಸುವವರಿಲ್ಲ;
ತೊರೆಯುವ ಪ್ರೀತಿಯನು ಹಿಂಬಾಲಿಸುವರು ಎಲ್ಲಾ,
ಹೆತ್ತವರ ಪ್ರೀತಿಯೇ ಶಾಶ್ವತ ಎಂದೂ ಯಾರಿಗೂ ಗೊತ್ತಿಲ್ಲ.
                        - ಸ್ಫೂರ್ತಿ

ಪಯಣ ಸಂಗಾತಿ

ಮಾಸದ ಮುಗ್ಧತೆಯ ನೋಟವೂ ನೀ,
ಹುಣ್ಣಿಮೆಯ ಶಶಿಯ ಬಿಂಬವೂ ನೀ;
ಪ್ರೀತಿಯ ಹೊತ್ತು ತಂದ ದೇವನು ನೀ,
ಸದಾ ನನ್ನ ಪಯಣ ಸಂಗಾತಿ ಆಗು ನೀ.
                             - ಸ್ಫೂರ್ತಿ

ರಾಷ್ಟ್ರೀಯ ಯುವ ದಿನ

ಜ್ಞಾನ ಭಂಡಾರದ ಯಾಂತ್ರಿಕ,
ಆಧ್ಯಾತ್ಮ,ತತ್ವಶಾಸ್ತ್ರದ ಸಾತ್ವಿಕ;
ಯುವಪೀಳಿಗೆಗೆ ಸಾಧನೆ ಮಂತ್ರದ ಮಾಂತ್ರಿಕ,
ದೇಶ ಪ್ರೇಮದ ಧೀಮಂತ ನಾಯಕ.
                              - ಸ್ಫೂರ್ತಿ

ಪ್ರೀತಿಯ ವೇದಿಕೆ

ಹೃದಯವು ಮರೆತಿಲ್ಲಾ ನಮ್ಮ ಪ್ರೀತಿಯನು,
ಮನಸ್ಸು ತಿರುವಿ ಹಾಕುತ್ತಿದ್ದೆ ನೆನಪಿನ ಛಾಯೆಯನು;
ಪದೇ ಪದೇ ಒಂದಾಗುವಾಸೆ ಈ ಜೀವಕೆ,
ಕೂಡಿ ಬಂದರೆ ಆ ಕ್ಷಣ ನಾ ತಯಾರಿಸುವೆ ವೇದಿಕೆ.
                         - ಸ್ಫೂರ್ತಿ

ಒಂಟಿ ಜೀವನದ ಯಾತ್ರೆ

ಉರುಳುತ್ತಿದೆ ಸಮಯದ ಚಕ್ರವೂ,
ಮರೆಯಾಗುತ್ತಿದೆ ಕಳೆದ ದಿನಗಳು;
ನೆನಪಿಸುತ್ತಿದೆ ನೋವಿನ ತಿಮಿರುಗಳು,
ಪಯಣಿಸುತ್ತಿದೆ ಒಂಟಿ ಜೀವನದ ಯಾತ್ರೆಯೂ.
                      - ಸ್ಫೂರ್ತಿ

ಮೌನ

ಮೌನ ತಾಳಿತು ಮನಸು,
ಕರಗಿ ಹೋಯಿತು ಕನಸು;
ನಿನ್ನ ಪ್ರೀತಿಯ ನೆನಪಿನಲಿ,
ನಿನ್ನ ಸ್ನೇಹದ ಹುಡುಕಾಟದಲಿ.
                              - ಸ್ಫೂರ್ತಿ

ತುಕ್ಕು ಹಿಡಿದ ಕಬ್ಬಣ

ಹಿಡಿದಿರಲು ತುಕ್ಕು ಕಬ್ಬಿಣದ ವಸ್ತುಗಳಿಗೆ,
ಎಷ್ಟೇ ಪ್ರಯತ್ನಿಸಿದರೂ ಸರಿಯಾಗದು ಕೊನೆಗೆ;
ಹಿಡಿಯಬಾರದು ತುಕ್ಕು ನಮ್ಮ ಜೀವನದ ಗುರಿಗಳಿಗೆ,
ಹಿಡಿದರೆ ನಮ್ಮ ದಾರಿ ಪಲಾಯನದ ಕಡೆಗೆ.
                         - ಸ್ಫೂರ್ತಿ

ಅಮರವಾದ ಸ್ನೇಹ

ನಮ್ಮಿಬ್ಬರ ಸ್ನೇಹದ ತುಂಬಾ ತಮವಿದೆ,
ಹಿಮ ಕರಗಿ ನೀರಾಗಿ ನಿನ್ನ ಸ್ನೇಹ ಆವರಿಸಿದೆ;
ಆ ಸ್ನೇಹವ ಕೈ ಹಿಡಿದು ಬೆಳೆಸಿದೆ,
ಬೆಳೆದ ಸ್ನೇಹ ಇಂದು ಆಲದ ಮರವಾಗಿದೆ.
                       - ಸ್ಫೂರ್ತಿ

ಕಟ್ಟಬೇಕಿದೆ ನೆನಪಿಗೊಂದು ಗೋರಿ

ಬಳಿ ಬಂದೆನು ನಿನ್ನ ಪ್ರೀತಿಯ ಕೋರಿ,
ಅಕ್ಕರೆ ವಿಶ್ವಾಸದ ಕರುಣೆಯನ್ನು ತೋರಿ;
ಸಹಿಸಿದೆ ನಿನ್ನ ಬೂಟಾಟಿಕೆ ಮಾತನು ಮೀರಿ,
ಸತ್ತ ಪ್ರೀತಿಯ ನೆನಪಿಗೆ ಕಟ್ಟುವೆನು ಗೋರಿ.
                        - ಸ್ಫೂರ್ತಿ

ಸೌಂದರ್ಯ


ಕಣ್ ಕುಕ್ಕುವುದು ಆ ದಿವ್ಯವಾದ ನೋಟ,
ನೋಡುಗರಿಗೆ ಮಾಡುವುದು ಕನಸಿನ ಮಾಟ;
ಮನದ ತುಂಬೆಲ್ಲಾ ನಿನ್ನ ಪ್ರೀತಿಯ ಗುಂಗು,
ನನ್ನ ಬಾಳ ತುಂಬೆಲ್ಲಾ ನಿನ್ನ ನಗುವ ರಂಗು.
                              - ಸ್ಫೂರ್ತಿ

Monday, January 7, 2019

ಮಂದಹಾಸದ ಪ್ರವಾಹ

ಮಂದಹಾಸದ ಕಡಲಿನಲ್ಲಿ ಮುಳುಗುತ್ತಾ,
ಮುಗುಳು ನಗೆಯ ಅಲೆಗಳಲ್ಲಿ ತೇಲುತ್ತಾ;
ಬೆಳದಿಂಗಳ ಚಂದ್ರಮಕೆ ಸೋಲುತ್ತಾ,
ಸಂತೋಷದ ಪ್ರವಾಹವನ್ನು ನಾ ತಂದೆ.
                                                  - ಸ್ಫೂರ್ತಿ

ಬೇಲೂರ ವೈಭವ

ಶಿಲ್ಪಕಲೆಗಳ ಹೆಮ್ಮೆಯ ಊರು,
ಇಲ್ಲಿದೆ ನರ್ತಕಿಯರ ಶಿಲ್ಪಗಳು ಸಾವಿರಾರು;
ಇಲ್ಲಿ ವಾಸಿಸುತ್ತಿರುವುದು ಚೆನ್ನಕೇಶವ ದೇವರು,
ಅದುವೇ ಶಿಲ್ಪಸ್ಥಾವರದ ಬೀಡು ಬೇಲೂರು.
                                              - ಸ್ಫೂರ್ತಿ

ಹಳಿಯ ಮೇಲೆ ಜೀವನ

ಜೀವನ ಸಾಗುತ್ತಿದೆ ಹಳಿಗಳ ಕಡೆಗೆ,
ಕಷ್ಟ-ಸುಖಗಳು ಬಂಡಿಯ ಒಳಗೆ;
ನಂಬಿಕೆಯ ಕೊಂಡಿ ಕಳಚಿದರೆ ಕೆಳಗೆ,
ಭರವಸೆಯ ಹಾದಿ ಅರ್ನತವಾಗುವುದು ಕೊನೆಗೆ.
                                    - ಸ್ಫೂರ್ತಿ


ಎಲೆ

ಬಿಸಿಲಿನ ಬೇಗೆಗೆ ಬಸವಳಿದ ಎಲೆ ಬಿತ್ತು,
ತನ್ನ ಆಸೆ ಆಕಾಂಕ್ಷೆಗಳು ಕರಟು ಹೋಗಿತ್ತು;
ಮರೆಯಾಯಿತು ಎಲ್ಲರಿಗೂ ಹೇಳುತ್ತಾ,
ಎಲ್ಲರ ಬದುಕು ಕೊನೆಗೆ ಪತನದತ್ತಾ.
                                         - ಸ್ಫೂರ್ತಿ